ಬಾಜೀರಾವ್ ಮಸ್ತಾನಿ ೨೦೧೫ರ ಒಂದು ಹಿಂದಿ ಅದ್ಭುತ ಶೈಲಿಯ ಐತಿಹಾಸಿಕ ಪ್ರಣಯಪ್ರಧಾನ ಚಲನಚಿತ್ರವಾಗಿದೆ. ಸಂಜಯ್ ಲೀಲಾ ಭಂಸಾಲಿ ಈ ಚಿತ್ರದ ನಿರ್ದೇಶಕರು ಮತ್ತು ಇದರ ಧ್ವನಿವಾಹಿನಿಯನ್ನೂ ಸಂಯೋಜಿಸಿದ್ದಾರೆ. ಚಿತ್ರವನ್ನು ಭನ್ಸಾಲಿ ಮತ್ತು ಈರಾಸ್ ಇಂಟರ್‌ನ್ಯಾಷನಲ್‍ನ ಕಿಶೋರ್ ಲುಲ್ಲಾ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ರಣ್ವೀರ್ ಸಿಂಗ್, ದೀಪಿಕಾ ಪಡುಕೋಣೆ ಮತ್ತು ಪ್ರಿಯಾಂಕಾ ಚೋಪ್ರಾ ನಟಿಸಿದ್ದಾರೆ. ಪೋಷಕ ಪಾತ್ರವರ್ಗದಲ್ಲಿ ತನ್ವಿ ಆಜ಼್ಮಿ, ವೈಭವ್ ತತ್ವವಾದಿ ಮತ್ತು ಮಿಲಿಂದ್ ಸೋಮನ್ ಇದ್ದಾರೆ. ನಾಗ್‍ನಾಥ್ ಎಸ್. ಇನಾಮ್‍ದಾರ್‌ರ ಕಾಲ್ಪನಿಕ ಮರಾಠಿ ಕಾದಂಬರಿ ರಾವ್ ಮೇಲೆ ಆಧಾರಿತವಾದ ಬಾಜೀರಾವ್ ಮಸ್ತಾನಿ ಮರಾಠಾ ಪೇಶ್ವಾ ಮೊದಲನೆಯ ಬಾಜಿರಾವ್ (ಕ್ರಿ.ಶ. ೧೭೦೦-೧೭೪೦) ಮತ್ತು ಅವನ ಎರಡನೇ ಹೆಂಡತಿಯ ಕಥೆಯನ್ನು ಹೇಳುತ್ತದೆ. ೧೯೯೦ರ ದಶಕದಷ್ಟು ಮೊದಲೇ ಕಲ್ಪಿತವಾದ ಈ ಚಿತ್ರವನ್ನು ಭನ್ಸಾಲಿ ೨೦೦೩ರಲ್ಲಿ ಘೋಷಿಸಿದರು. ಆದರೆ ಅದರ ಬದಲಾಗುತ್ತಿರುವ ಪಾತ್ರವರ್ಗದ ಕಾರಣ ತಯಾರಿಕೆಯು ಹಲವಾರು ಬಾರಿ ವಿಳಂಬಗೊಂಡಿತು. ಭನ್ಸಾಲಿಯವರ ತೀವ್ರಾಸಕ್ತಿಯ ಯೋಜನೆಯಾದ ಬಾಜೀರಾವ್ ಮಸ್ತಾನಿ ೨೦೧೪ರಲ್ಲಿ ಪುನರುಜ್ಜೀವಿತಗೊಳ್ಳುವ ಮೊದಲು ಮುಂದಿನ ಹನ್ನೊಂದು ವರ್ಷಗಳು ತಯಾರಿಕಾ ನರಕದಲ್ಲಿ ಕಳೆಯಿತು. ನಿರ್ಮಾಣಪೂರ್ವ ಹಂತಕ್ಕೆ ಹೋಗುವ ಮೊದಲು ವ್ಯಾಪಕ ಸಂಶೋಧನೆಯನ್ನು ಮಾಡಲಾಯಿತು. ಇದರ ಭವ್ಯತೆ ಮತ್ತು ಉನ್ನತ ತಯಾರಿಕಾ ಮೌಲ್ಯವನ್ನು ಬಲಪಡಿಸಲು ಇದಕ್ಕೆ ಇಪ್ಪತ್ತೆರಡು ಬಹಳ ವಿವರವಾದ ರಂಗಸಜ್ಜುಗಳು, ಮತ್ತು ಅಸಂಖ್ಯಾತ ವಸ್ತ್ರಗಳು ಹಾಗೂ ರಂಗಪರಿಕರಗಳು ಬೇಕಾದವು. ಪ್ರಧಾನ ಛಾಯಾಗ್ರಹಣವು ಫ಼ಿಲ್ಮ್ ಸಿಟಿಯಲ್ಲಿ ನಿರ್ಮಾಣವಾದ ರಂಗಸಜ್ಜುಗಳಲ್ಲಿ ನಡೆಯಿತು. ಕೆಲವು ಭಾಗಗಳನ್ನು ಸ್ಥಳದಲ್ಲಿ ಚಿತ್ರೀಕರಿಸಲಾಯಿತು. ಅನೇಕ ದೃಶ್ಯಗಳನ್ನು ವರ್ಧಿಸಲು ನಿರ್ಮಾಣೋತ್ತರ ಹಂತದಲ್ಲಿ ದೃಶ್ಯ ಪರಿಣಾಮಗಳು ಮತ್ತು ಸಿಜಿಐ ಯನ್ನು ಬಳಸಲಾಯಿತು. ಚಿತ್ರವು ೧೮ ಡಿಸೆಂಬರ್ ೨೦೧೫ರಂದು ಬಿಡುಗಡೆಗೊಂಡಿತು. ಭನ್ಸಾಲಿಯವರ ನಿರ್ದೇಶನ, ವಿವಿಧ ತಾಂತ್ರಿಕ ಸಾಧನೆಗಳು ಮತ್ತು ಪಾತ್ರವರ್ಗದ ಅಭಿನಯಗಳನ್ನು ಪ್ರಶಂಸಿಸಲಾಯಿತು. ಬಾಜೀರಾವ್ ಮಸ್ತಾನಿ ಅದರ ಪ್ರಮಾಣ, ಭವ್ಯತೆ ಮತ್ತು ವಿವರದ ಬಗ್ಗೆ ಗಮನಕ್ಕಾಗಿಯೂ ಪ್ರಸಿದ್ಧವಾಗಿದೆ. ಮಾರಾಟಗಾರಿಕೆ ಮತ್ತು ಜಾಹೀರಾತುಗಳು ಸೇರಿದಂತೆ ₹145 ಕೋಟಿ ಬಂಡವಾಳದ ಈ ಚಿತ್ರವು ಅತ್ಯಂತ ದುಬಾರಿ ಹಿಂದಿ ಚಲನಚಿತ್ರಗಳಲ್ಲಿ ಒಂದಾಗಿದೆ. ಬಾಕ್ಸ್ ಆಫ಼ಿಸ್‍ನಲ್ಲಿ ಈ ಚಿತ್ರವು ₹356 ಕೋಟಿಗಿಂತ ಹೆಚ್ಚು ಹಣ ಗಳಿಸಿ ಪ್ರಮುಖ ವಾಣಿಜ್ಯಿಕ ಯಶಸ್ಸಾಯಿತು. ಹಲವಾರು ಪ್ರಶಸ್ತಿ ಗೌರವಗಳನ್ನು ಪಡೆದ ಬಾಜೀರಾವ್ ಮಸ್ತಾನಿ ಅತ್ಯುತ್ತಮ ನಿರ್ದೇಶಕ ಮತ್ತು ಆಜ಼್ಮಿ ಅವರಿಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಸೇರಿದಂತೆ ಎಳು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದಿತು. ೬೧ನೇ ಫಿಲ್ಮ್‌ಫೇರ್ ಪ್ರಶಸ್ತಿ ಸಮಾರಂಭದಲ್ಲಿ ಚಿತ್ರವು ಹದಿನಾಲ್ಕು ನಾಮನಿರ್ದೇಶನಗಳನ್ನು ಪಡೆದು ಅತ್ಯುತ್ತಮ ಚಲನಚಿತ್ರ, ಭನ್ಸಾಲಿಯವರಿಗೆ ಅತ್ಯುತ್ತಮ ನಿರ್ದೇಶಕ, ಸಿಂಗ್‍ರಿಗೆ ಅತ್ಯುತ್ತಮ ನಟ, ಚೋಪ್ರಾರಿಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಸೇರಿದಂತೆ ಒಂಭತ್ತು ಪ್ರಶಸ್ತಿಗಳನ್ನು ಗೆದ್ದಿತು. ಜ಼ೀ ಸಿನೆ ಪ್ರಶಸ್ತಿ ಸಮಾರಂಭದಲ್ಲಿ, ಸಿಂಗ್ ಅತ್ಯುತ್ತಮ ನಟ ವಿಮರ್ಶಕರ ಪ್ರಶಸ್ತಿ ಮತ್ತು ಪಡುಕೋಣೆ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಗೆದ್ದರು. == ಕಥಾವಸ್ತು == ೧೮ನೇ ಶತಮಾನದ ಮುಂಚಿನ ಭಾಗದಲ್ಲಿ, ಮರಾಠಾ ರಾಜ ಛತ್ರಪತಿ ಸಾಹುನ ಆಸ್ಥಾನಕ್ಕೆ ಪ್ರಧಾನಮಂತ್ರಿಯ ಸ್ಥಾನಕ್ಕೆ ಸಮಾನವಾದ ಹೊಸ ಪೇಷ್ವೆಯ ಅಗತ್ಯವಿರುತ್ತದೆ. ಅಂಬಾಜಿ ಪಂತ್ ಯುವ ಬಾಜೀರಾಯನ ಹೆಸರನ್ನು ಸೂಚಿಸಿದನು. ಪರೀಕ್ಷೆಯಾಗಿ, ಬಾಣದಿಂದ ಒಂದು ನವಿಲಿನ ಗರಿಯನ್ನು ಸೀಳಬೇಕೆಂದು ಬಾಜೀರಾಯನನ್ನು ಕೇಳಿಕೊಳ್ಳಲಾಗುತ್ತದೆ. ಅವನು ಯಶಸ್ವಿಯಾಗಿ ಅವನಿಗೆ ಪೇಶ್ವೆ ಎಂಬ ಬಿರುದನ್ನು ನೀಡಲಾಗುತ್ತದೆ. ಹತ್ತು ವರ್ಷಗಳ ನಂತರ, ಅವನ ಹೆಂಡತಿ ಕಾಶೀಬಾಯಿಯನ್ನು ಅವಳ ವಿಧವೆ ಸ್ನೇಹಿತೆ ಭಾನು ಭೇಟಿಯಾಗುತ್ತಾಳೆ. ಭಾನುಳ ಗಂಡನು ಬೇಹುಗಾರಿಕೆಯ ಆರೋಪ ಹೊತ್ತಿದ್ದರಿಂದ ಅವನ ಮರಣ ದಂಡನೆಯಾಗಬೇಕೆಂದು ಬಾಜೀರಾಯನು ಆದೇಶಿಸಿರುತ್ತಾನೆ. ತಾನು ಹೇಗೆ ತನ್ನ ಗಂಡನಿಗಾಗಿ ಹಂಬಲಿಸುತ್ತಿರುವಳೊ ಹಾಗೆಯೇ ಕಾಶೀಬಾಯಿ ಬಾಜೀರಾಯನಿಗೋಸ್ಕರ ಹಂಬಲಿಸುವಳು ಎಂದು ಅವಳು ಮುನ್ನುಡಿಯುತ್ತಾಳೆ. ಸಿರೋಂಜಾಗೆ ಪ್ರಯಾಣಿಸುವಾಗ, ಬುಂದೇಲ್ ಖಂಡ್‍ನ ಒಬ್ಬ ರಾಯಭಾರಿ ದಾಳಿಕಾರರ ವಿರುದ್ಧ ಹೋರಾಡಲು ಬಾಜೀರಾವ್‍ನ ಸಹಾಯವನ್ನು ಬೇಡುತ್ತಾನೆ. ಅವಳು ಹಿಂದೂ ರಜಪೂತ ರಾಜ ಛತ್ರಸಾಲ ಮತ್ತು ಅವನ ಪರ್ಷಿಯನ್ ಮುಸ್ಲಿಮ್ ಹೆಂಡತಿ ರೂಹಾನಿ ಬೇಗಮ್‍ಳ ಮಗಳು ಮಸ್ತಾನಿ ಎಂದು ಬಹಿರಂಗವಾಗುತ್ತದೆ. ಯೋಧೆಯಾಗಿ ಅವಳ ಕೌಶಲಗಳಿಂದ ಪ್ರಭಾವಿತನಾಗಿ ಬಾಜೀರಾವ್ ತನ್ನ ಸೇನೆಯ ನೆರವು ನೀಡಿ ಆಕ್ರಮಣಕಾರರನ್ನು ಸೋಲಿಸುತ್ತಾನೆ. ಅತ್ಯಾನಂದಗೊಂಡ ಛತ್ರಸಾಲನು ಬಾಜೀರಾಯನು ತಮ್ಮ ಜೊತೆ ಹೋಳಿಯನ್ನು ಆಚರಿಸಬೇಕೆಂದು ಆಗ್ರಹ ಮಾಡುತ್ತಾನೆ. ಈ ಅವಧಿಯಲ್ಲಿ ಮಸ್ತಾನಿ ಮತ್ತು ಬಾಜೀರಾಯ ಒಬ್ಬರನ್ನೊಬ್ಬರು ಪ್ರೀತಿಸತೊಡಗುತ್ತಾರೆ ಮತ್ತು ಅವನು ಅದು ರಜಪೂತರಲ್ಲಿ ಅದು ಮದುವೆಯ ಸಂಕೇತವಾಗಿದೆ ಎಂದು ಅರಿಯದೆಯೇ ಅವಳಿಗೆ ತನ್ನ ಬಾಕನ್ನು ಕೊಡುತ್ತಾನೆ. ಮರಳಿ ಪುಣೆಯ ತಮ್ಮ ಊರಲ್ಲಿ, ಕಾಶೀಬಾಯಿ ಬಾಜೀರಾಯನನ್ನು ಸ್ವಾಗತಿಸಿ ಹೊಸದಾಗಿ ನಿರ್ಮಿಸಿದ ಶನಿವಾರ್ ವಾಡಾ ಮತ್ತು ಅವಳಿಗೆ ಅವನನ್ನು ತನ್ನ ಕೋಣೆಯಿಂದ ನೋಡಲು ಸಾಧ್ಯವಾಗಿಸುವ ಆಯಿನಾ ಮೆಹೆಲ್‍ನ ಪ್ರವಾಸ ಮಾಡಿಸುತ್ತಾಳೆ. ತನ್ನ ಪ್ರೀತಿಯನ್ನು ಬೆನ್ನಟ್ಟಲು ದೃಢಸಂಕಲ್ಪ ಮಾಡಿ ಮಸ್ತಾನಿ ಪುಣೆಗೆ ಆಗಮಿಸುತ್ತಾಳೆ. ಆದರೆ ಬಾಜೀರಾಯನ ತಾಯಿ ರಾಧಾಬಾಯಿ ಅವಳನ್ನು ನಿರ್ದಯವಾಗಿ ಕಾಣುತ್ತಾಳೆ ಮತ್ತು ಅವಳನ್ನು ತನ್ನ ಸೊಸೆ ಎಂದು ಒಪ್ಪಿಕೊಳ್ಳಲು ನಿರಾಕರಿಸಿ ಅವಳಿಗೆ ವೇಶ್ಯೆಯರ ಅರಮನೆಯಲ್ಲಿ ಸ್ಥಳಮಾಡಿಕೊಡುತ್ತಾಳೆ. ಮಸ್ತಾನಿ ಇದನ್ನು ಸಹಿಸಿಕೊಂಡು ಬಾಜೀರಾಯನೊಂದಿಗೆ ಇರಬೇಕೆಂಬ ತನ್ನ ಆಸೆಯನ್ನು ದೃಢವಾಗಿ ವ್ಯಕ್ತಪಡಿಸುತ್ತಾಳೆ; ಬಾಜೀರಾಯ ಅವಳ ಹಠವನ್ನು ಬಲವಾಗಿ ಆಕ್ಷೇಪಿಸಿ ತಾನು ಆಗಲೇ ಮದುವೆಯಾಗಿದ್ದೇನೆಂದು ಮತ್ತು ಎಂದೂ ಸಂಪೂರ್ಣವಾಗಿ ಅವಳವನು ಆಗುವುದಿಲ್ಲ ಎಂದು ನೆನಪಿಸುತ್ತಾನೆ; ಅವನ ಆಸ್ಥಾನವೂ ಎಂದೂ ಅವಳನ್ನು ಗೌರವಿಸುವುದಿಲ್ಲ. ಮಸ್ತಾನಿ ಈ ಷರತ್ತುಗಳಿಗೆ ಒಪ್ಪಿಕೊಳ್ಳುತ್ತಾಳೆ. ಹಾಗಾಗಿ ಬಾಜೀರಾಯ ಅವಳನ್ನು ತನ್ನ ಎರಡನೇ ಹೆಂಡತಿಯೆಂದು ಘೋಷಿಸುತ್ತಾನೆ. ಮರಾಠರು ಮೊಘಲ್ ಸಾಮ್ರಾಜ್ಯದ ರಾಜಧಾನಿಯಾದ ದೆಹಲಿ ಮೇಲೆ ಆಕ್ರಮಣ ಮಾಡಲು ಸಿದ್ಧರಾಗುತ್ತಾರೆ. ಆದರೆ ಮೊದಲು ಹೈದರಾಬಾದ್ ರಾಜ್ಯದ ಮುಸ್ಲಿಮ್ ದೊರೆಯಾದ ಹೈದರಾಬಾದ್‍ ನಿಜ಼ಾಮನು ಅವರ ಮೇಲೆ ದಾಳಿ ಮಾಡುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕಾಗಿರುತ್ತದೆ. ಬಾಜೀರಾಯ ನಿಜ಼ಾಮನಾದ ಕಮರುದ್ದೀನ್ ಖಾನ್‍ನನ್ನು ಎದುರಿಸಲು ಹೊರಟು ಯಶಸ್ವಿಯಾಗಿ ಮರಳುತ್ತಾನೆ. ತನ್ನ ಆಯಿನಾ ಮೆಹೆಲ್ ಮೂಲಕ ಗರ್ಭಿಣಿ ಕಾಶೀಬಾಯಿ ಬಾಜೀರಾಯನು ತಾಯಿಯಾಗಲಿರುವ ಮಸ್ತಾನಿಯನ್ನು ಅಪ್ಪಿಕೊಳ್ಳುವುದನ್ನು ನೋಡುತ್ತಾಳೆ. ಅವಳ ಹೃದಯ ಭಗ್ನಗೊಂಡು, ಅವಳು ತನ್ನ ತಾಯಿಯ ಮನೆಗೆ ಹೊರಟು ಹಲವು ತಿಂಗಳುಗಳ ನಂತರ ರಘುನಾಥ್ ಎಂಬ ಹೆಸರಿನ ತನ್ನ ನವಜಾತ ಮಗನೊಂದಿಗೆ ಮರಳುತ್ತಾಳೆ. ಮಸ್ತಾನಿ ಕೂಡ ಕೃಷ್ಣ ರಾವ್ ಎಂಬ ಹೆಸರಿನ ಒಬ್ಬ ಮಗನಿಗೆ ಜನ್ಮಕೊಡುತ್ತಾಳೆ. ಕೃಷ್ಣ ರಾವ್‍ನು ಅಕ್ರಮನೆಂಬ ಕಾರಣದಿಂದ ಹಿಂದೂ ನಾಮಕರಣ ಸಮಾರಂಭವನ್ನು ನಡೆಸಿಕೊಡಲು ಬ್ರಾಹ್ಮಣ ಪೂಜಾರಿಯು ನಿರಾಕರಿಸಿದಾಗ ಬಾಜೀರಾಯನು ತನ್ನ ಮಗನನ್ನು ಮುಸ್ಲಿಮನಾಗಿ ಬೆಳೆಸುವೆ ಎಂದು ನಿರ್ಧರಿಸಿ ತನ್ನ ಮಗನಿಗೆ ಶಮ್‍ಶೇರ್ ಬಹಾದೂರ್ ಎಂದು ಮರುನಾಮಕರಣ ಮಾಡುತ್ತಾನೆ. ಕೆಲವು ವರ್ಷಗಳ ನಂತರ, ಕಾಶೀಬಾಯಿ ಮತ್ತು ಬಾಜೀರಾಯನ ಹಿರಿಯ ಮಗ, ನಾನಾ ಸಾಹೇಬ್ ಎಂದು ಕರೆಯಲ್ಪಡುವ ಬಾಲಾಜಿ ಬಾಜೀರಾಯನು ಸತಾರದಿಂದ ಮರಳಿ ತನ್ನ ತಾಯಿಯ ಮದುವೆಯನ್ನು ಮುರಿದಿದ್ದಕ್ಕಾಗಿ ಮಸ್ತಾನಿಯ ಬಗ್ಗೆ ತನ್ನ ಹಗೆತನವನ್ನು ವ್ಯಕ್ತಪಡಿಸುತ್ತಾನೆ. ಒಂದು ಉತ್ಸವದ ಸಂದರ್ಭದಲ್ಲಿ ಮಸ್ತಾನಿ ಮತ್ತು ಅವಳ ಮಗನನ್ನು ಕೊಲ್ಲುವ ಒಂದು ಯೋಜನೆಯ ಬಗ್ಗೆ ಕಾಶೀಬಾಯಿಗೆ ತಿಳಿಯುತ್ತದೆ. ಅವಳು ಈ ಮಾಹಿತಿಯನ್ನು ಅರಿವಿಲ್ಲದ ಬಾಜೀರಾಯನಿಗೆ ಪ್ರಸಾರ ಮಾಡಿದಾಗ ಅವನು ಕೂಡಲೇ ಅವರನ್ನು ಕಾಪಾಡುತ್ತಾನೆ. ಹೀಗೆ ಅವಳು ಮಸ್ತಾನಿಯನ್ನು ಕಾಪಾಡುತ್ತಾಳೆ. ಮಸ್ತಾನಿಯನ್ನು ಸುರಕ್ಷಿತವಾಗಿಟ್ಟು ಅವಳಿಗೆ ಒಂದು ರಾಜಯೋಗ್ಯ ಮನೆಯನ್ನು ನೀಡಲು, ಬಾಜೀರಾಯನು ಅವಳಿಗಾಗಿ ಒಂದು ಅರಮನೆಯನ್ನು ಕಟ್ಟಿಸುತ್ತಾನೆ. ನಂತರ ಅವನು ನಿಜ಼ಾಮನ ಸೇಡಿನ ಮನೋವೃತ್ತಿಯ ಮಗನಾದ ನಾಸಿರ್ ಜಂಗ್‍ನನ್ನು ಸೋಲಿಸಲು ರಣರಂಗಕ್ಕೆ ಹೊರಡುತ್ತಾನೆ. ಹೊರಡುವ ಮುನ್ನ, ಅವನು ಹೆಂಡತಿಯು ಗಂಡನನ್ನು ಯುದ್ಧಕ್ಕೆ ಕಳಿಸಿಕೊಡುವ ಸಂಪ್ರದಾಯಕ್ಕೆ ಗೌರವ ಕೊಟ್ಟು ಕಾಶೀಬಾಯಿಯನ್ನು ಭೇಟಿಯಾಗುತ್ತಾನೆ. ಅಳುತ್ತಿರುವ ಕಾಶೀಬಾಯಿಯು ಬಾಜೀರಾಯನು ತನ್ನ ಹೃದಯ ಒಡೆದನು ಮತ್ತು ಅವನು ಏನು ಮಾಡಿದ್ದಾನೊ ಅದರ ಬಗ್ಗೆ ಹೆಮ್ಮೆ ಇದೆ ಎಂದು ವಿವರಿಸುತ್ತಾಳೆ, ಮತ್ತು ತಮ್ಮ ಪ್ರೀತಿಯನ್ನು ಕೃಷ್ಣ ಹಾಗೂ ರುಕ್ಮಿಣಿಯರ ಪ್ರೀತಿಗೆ ಹೋಲಿಸುತ್ತಾಳೆ. ಅವನು ಮತ್ತೆಂದೂ ಅವಳ ಕೋಣೆಯನ್ನು ಪ್ರವೇಶಿಸಬಾರದು ಎಂದು ಅವಳು ಅವನನ್ನು ಕೇಳಿಕೊಳ್ಳುತ್ತಾಳೆ. ಕಣ್ಣಿನಲ್ಲಿ ನೀರು ಬಂದಿರುವ ಬಾಜೀರಾಯನು ಅವಳನ್ನು ನೋಯಿಸಿದ್ದಕ್ಕಾಗಿ ಅವಳ ಕ್ಷಮೆ ಬೇಡಿ ಅದಕ್ಕೆ ಒಪ್ಪಿಕೊಳ್ಳುತ್ತಾನೆ. ಬಾಜೀರಾಯನು ಹೊರಟ ಮೇಲೆ, ಅವನ ತಾಯಿ ಮತ್ತು ನಾನಾ ಸಾಹೇಬ್ ಮಸ್ತಾನಿ ಮತ್ತು ಅವಳ ಮಗನನ್ನು ಸೆರೆಗೆ ಹಾಕುತ್ತಾರೆ. ಬಾಜೀರಾಯನಿಗೆ ಈ ಸುದ್ದಿ ಬಂದ ನಂತರ ಅವನು ಒಬ್ಬನೇ ಕೋಪದಲ್ಲಿ ನಾಸಿರ್ ಜಂಗ್‍ನ ಸೇನೆಯನ್ನು ಸೋಲಿಸುತ್ತಾನೆ ಆದರೆ ಮಾರಣಾಂತಿಕವಾಗಿ ಗಾಯಗೊಳ್ಳುತ್ತಾನೆ. ಬಾಜೀರಾಯನ ಮರಣಶಯ್ಯೆಯಲ್ಲಿ, ಕಾಶೀಬಾಯಿ ಅವನು ಚೇತರಿಸಿಕೊಳ್ಳಲು ಸಾಧ್ಯವಾಗಲು ಮಸ್ತಾನಿಯನ್ನು ಬಿಟ್ಟುಬಿಡುವಂತೆ ಅವನ ತಾಯಿಯನ್ನು ಬೇಡಿಕೊಂಡು ಒಂದು ಪತ್ರವನ್ನು ಕಳಿಸುತ್ತಾಳೆ. ನಾನಾ ಸಾಹೇಬ್ ಪತ್ರವನ್ನು ಸುಟ್ಟುಬಿಡುತ್ತಾನೆ, ಆದರೆ ಮಸ್ತಾನಿಯ ಮಗನನ್ನು ಬಿಡುಗಡೆ ಮಾಡಲಾಗುತ್ತದೆ. ತನ್ನ ಕಾಯಿಲೆಯಿಂದ ಸನ್ನಿ ಹಿಡಿಯಲ್ಪಟ್ಟ ಬಾಜೀರಾಯನು ಕಾಶೀಬಾಯಿಯು ಅಸಹಾಯಕಳಾಗಿ ನೋಡುತ್ತಿರುವಂತೆ ಭ್ರಮೆಹಿಡಿದು ಸಾಯುತ್ತಾನೆ; ಅದೇ ವೇಳೆ ಮಸ್ತಾನಿ ಸೆರೆಮನೆಯಲ್ಲಿ ಸಾಯುತ್ತಾಳೆ. ದುರದೃಷ್ಟದ ಪ್ರೇಮಿಗಳು ಸಾವಿನಲ್ಲಿ ಒಂದಾಗುತ್ತಾರೆ. == ಪಾತ್ರವರ್ಗ == == ತಯಾರಿಕೆ == === ಬೆಳವಣಿಗೆ === ಸಂಜಯ್ ಲೀಲಾ ಭನ್ಸಾಲಿ ಮರಾಠಾ ಪೇಶ್ವಾ ಬಾಜೀರಾಯ ಮತ್ತು ಅವನ ಎರಡನೇ ಹೆಂಡತಿ ಮಸ್ತಾನಿ ಬಗೆಗಿನ ಐತಿಹಾಸಿಕ ಪ್ರಣಯಪ್ರಧಾನ ಚಿತ್ರವನ್ನು ತಮ್ಮ ಮೊದಲ ಚಿತ್ರವಾದ ಖಾಮೋಶಿ: ದ ಮ್ಯೂಜ಼ಿಕಲ್ ನ್ನು ನಿರ್ದೇಶಿಸುವ ಮೊದಲೇ ಕಲ್ಪಿಸಿಕೊಂಡಿದ್ದರು. ಈ ಇಬ್ಬರು ಐತಿಹಾಸಿಕ ವ್ಯಕ್ತಿಗಳ ಬಗ್ಗೆ ಚಲನಚಿತ್ರವನ್ನು ತಯಾರಿಸಲು ಅನೇಕ ಇತರ ನಿರ್ದೇಶಕರು ಪ್ರಯತ್ನಿಸಿದ್ದರು, ಆದರೆ ಅವು ತಯಾರಾಗಲಿಲ್ಲ. ದೇವ್‍ದಾಸ್ (೨೦೦೨) ಚಿತ್ರದ ಬಿಡುಗಡೆಯ ನಂತರ ಭನ್ಸಾಲಿ ಬಾಜೀರಾವ್ ಮಸ್ತಾನಿ ಚಿತ್ರವನ್ನು ತಯಾರಿಸಲು ಉದ್ದೇಶಿಸಿದ್ದರು ಮತ್ತು ೨೦೦೩ರಲ್ಲಿ ಅದನ್ನು ಅಧಿಕೃತವಾಗಿ ಘೋಷಿಸಿದ್ದರು. ಚಿತ್ರೀಕರಣವು ಮೇ ೨೦೦೪ ರಲ್ಲಿ ಆರಂಭವಾಗುವುದೆಂದು ನಿರ್ಧಾರಿತವಾಗಿತ್ತು. ಆದರೆ ಚಿತ್ರವು ಅನಿರ್ದಿಷ್ಟವಾಗಿ ಮುಂದೂಡಲ್ಪಟ್ಟಿತು. ಈ ಪ್ರಕ್ರಿಯೆಯಲ್ಲಿ, ಈ ಚಿತ್ರವು ಅವರಿಗೆ ತೀವ್ರಾಸಕ್ತಿಯ ಯೋಜನೆಯಾಯಿತು. ಭನ್ಸಾಲಿ ಈ ಯೋಜನೆಯನ್ನು ೨೦೧೪ ರಲ್ಲಿ ಪುನರುಜ್ಜೀವಿತಗೊಳಿಸಿದರು. ಅವರು ಬಾಜೀರಾವ್ ಮತ್ತು ಮಸ್ತಾನಿ ನಡುವಿನ ಸಂಬಂಧವನ್ನು ತೋರಿಸಲು ಬಯಸಿದ್ದರು ಏಕೆಂದರೆ ಅದು ಇತಿಹಾಸದ ಪುಸ್ತಕಗಳಲ್ಲಿ ಅಪರೂಪವಾಗಿ ನಿರೂಪಿತವಾಗಿದೆ, ಮತ್ತು ಅದರ ಬಗ್ಗೆ ಕಡಿಮೆ ತಿಳಿದಿದೆ. ಅವರು ದೀರ್ಘಕಾಲದಿಂದ ಮರಾಠಾ ಹಿನ್ನೆಲೆ ಮತ್ತು ಮುಖ್ಯಪಾತ್ರಗಳ ವಿಭಿನ್ನ ಧರ್ಮಗಳನ್ನು (ಬಾಜೀರಾವ್ ಹಿಂದೂ ಆಗಿದ್ದನು ಮತ್ತು ಮಸ್ತಾನಿ ಮುಸ್ಲಿಮ್ ಆಗಿದ್ದಳು) ಮೆಚ್ಚಿದ್ದರು. ಇದು ಹೆಚ್ಚು ತಿಳಿದುಕೊಳ್ಳುವ ಮತ್ತು ಕಥೆಯನ್ನು ಹೇಳುವ ಬಗ್ಗೆ ಅವರ ಆಸಕ್ತಿಯನ್ನು ಮತ್ತಷ್ಟು ಚಾಲನೆ ಮಾಡಿತು. ಪ್ರಕಾಶ್ ಆರ್. ಕಪಾಡಿಯಾ ಚಿತ್ರಕಥೆಯನ್ನು ಬರೆದರು. ಚಿತ್ರದ ತಯಾರಕರು ಕಾದಂಬರಿಯ ಹಕ್ಕುಗಳನ್ನು ಪಡೆದು ಇತಿಹಾಸಕಾರ ನಿನಾದ್ ಬೇಡೇಕರ್‌ರೊಂದಿಗೆ ಕೆಲಸ ಮಾಡಿದರು. ಅದರ ಕಲ್ಪನೆಯ ಹಂತದಿಂದ ಕಪಾಡಿಯಾ ಮತ್ತು ಭನ್ಸಾಲಿ ಚಿತ್ರಕಥೆಯ ಮೇಲೆ ಒಂದೇ ಸಮನೆ ಕೆಲಸಮಾಡಿದ್ದರು, ಮತ್ತು ಚಲನಚಿತ್ರದ ಹಲವಾರು ಅಂಶಗಳನ್ನು ನಯಗೊಳಿಸಿದ್ದರು. ಕಥೆಯನ್ನು ಹನ್ನೆರಡು ವರ್ಷಗಳ ಹಿಂದೆ ಬರೆಯಲಾಗಿತ್ತೆಂದು ಪರಿಗಣಿಸಿ ಅದಕ್ಕೆ ಹಲವಾರು ಬದಲಾವಣೆಗಳನ್ನು ಮಾಡಲಾಯಿತು, ಉದಾ. ಉದ್ದವನ್ನು ಕಡಿಮೆ ಮಾಡಿದ್ದು ಮತ್ತು ಆಧುನಿಕ ಪ್ರೇಕ್ಷಕರಿಗೆ ಸೂಕ್ತವಾಗುವಂತೆ ವೇಗವನ್ನು ಹೆಚ್ಚಿಸಿದ್ದು. ಈ ಚಿತ್ರವು ಕಾದಂಬರಿಯಿಂದ ರೂಪಾಂತರಿತವಾಗಿದೆಯಾದರೂ, ಮುಖ್ಯ ಪಾತ್ರಗಳ ನಡುವಿನ ಪ್ರಣಯವನ್ನು ಇತಿಹಾಸದ ಪುಸ್ತಕಗಳು ಅಥವಾ ದಾಖಲೆಗಳಲ್ಲಿ ಸರಿಯಾಗಿ ದಾಖಲಿಸಲಾಗಿಲ್ಲ ಮತ್ತು ಕಥೆಯ ಹಲವಾರು ರೂಪಗಳು ಅಸ್ತಿತ್ವದಲ್ಲಿವೆ. ನಾಟಕವನ್ನು ನಿರ್ಮಿಸಲು ಮತ್ತು ಘಟನೆಗಳ ಮೇಲೆ ಒತ್ತು ಕೊಡಲು ಅನೇಕ ಸಿನಿಮೀಯ ಸ್ವಾತಂತ್ರ್ಯಗಳನ್ನು ತೆಗೆದುಕೊಳ್ಳಲಾಯಿತು. === ಪಾತ್ರ ನಿರ್ಧಾರಣ === ಭನ್ಸಾಲಿ ಮೊದಲು ಹಮ್ ದಿಲ್ ದೇ ಚುಕೆ ಸನಮ್ (೧೯೯೯) ಚಿತ್ರದ ಮುಖ್ಯ ನಟರನ್ನು (ಸಲ್ಮಾನ್‌ ಖಾನ್‌ ಮತ್ತು ಐಶ್ವರ್ಯಾ ರೈ) ಈ ಚಿತ್ರದ ಮುಖ್ಯ ಪಾತ್ರಗಳಿಗೆ ಪುನರಾವರ್ತಿಸಲು ಬಯಸಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ೨೦೦೩ ರಲ್ಲಿ ಚಿತ್ರವು ಅಂತಿಮವಾಗಿ ಘೋಷಿತವಾದಾಗ ಭನ್ಸಾಲಿ ಮುಖ್ಯ ಪಾತ್ರಗಳನ್ನು ಖಾನ್ ಮತ್ತು ಕರೀನಾ ಕಪೂರ್‌ರಿಗೆ ಹಂಚಿದ್ದರು. ಆದರೆ ಈ ಯೋಜನೆಯನ್ನು ಕೈಬಿಡಲಾಯಿತು. ಹಾಗಾಗಿ ಈ ಚಿತ್ರವನ್ನು ಕೈಬಿಟ್ಟು ಭನ್ಸಾಲಿ ಇತರ ಚಿತ್ರಗಳನ್ನು ನಿರ್ದೇಶಿಸಲು ಮುಂದಾದರು. ಮೊದಲು ದೇವ್‍ಗನ್‍ರನ್ನು ಪರಿಗಣಿಸಲಾಯಿತಾದರೂ ಅವರು ಕಾರಣಾಂತರಗಳಿಂದ ಚಿತ್ರದಿಂದ ಹೊರಬಂದರು. ಜುಲೈ ೨೦೧೪ರಲ್ಲಿ, ಪ್ರಧಾನ ಪಾತ್ರಗಳನ್ನು ವಹಿಸಲು ರಣ್‍ವೀರ್ ಸಿಂಗ್, ದೀಪಿಕಾ ಪಡುಕೋಣೆ ಮತ್ತು ಪ್ರಿಯಾಂಕಾ ಚೋಪ್ರಾರನ್ನು ಅಂತಿಮಗೊಳಿಸಲಾಗಿದೆ ಎಂದು ಅಧಿಕೃತವಾಗಿ ಧೃಢಪಡಿಸಲಾಯಿತು. ಚಿತ್ರದಲ್ಲಿ ನಿರ್ಧಾರಿತವಾದ ಮೊದಲ ನಟಿಯ ಪಾತ್ರವೆಂದರೆ ಚೋಪ್ರಾರದ್ದು. ಮಿಲಿಂದ್ ಸೋಮನ್ ಪಾತ್ರವರ್ಗವನ್ನು ಆಗಸ್ಟ್ ೨೦೧೪ರ ಕೊನೆಯ ಭಾಗದಲ್ಲಿ ಸೇರಿಕೊಂಡರು. ಸೆಪ್ಟೆಂಬರ್ ೨೦೧೪ರ ಕೊನೆಯ ಭಾಗದಲ್ಲಿ, ತನ್ವಿ ಆಜ಼್ಮಿಗೆ ಬಾಜೀರಾವ್‍ನ ತಾಯಿ ರಾಧಾಬಾಯಿಯ ಪಾತ್ರ ಹಂಚಲಾಗಿದೆ ಎಂದು ದೃಢಪಡಿಸಲಾಯಿತು; ಈ ಪಾತ್ರಕ್ಕೆ ಇತರ ನಟಿಯರನ್ನೂ ಪರಿಗಣಿಸಲಾಗಿತ್ತು. ಅದರ ಮುಂದಿನ ತಿಂಗಳು ಆದಿತ್ಯ ಪಾಂಚೋಲಿ ಖಳನಟನಾಗಿ ಪಾತ್ರವರ್ಗವನ್ನು ಸೇರಿಕೊಂಡರು. ನವೆಂಬರ್ ೨೦೧೪ರಲ್ಲಿ, ಬಾಜೀರಾವ್‍ನ ಸೋದರಿಯರ ಪಾತ್ರಹಂಚಿಕೆಯನ್ನು ಅಂತಿಮಗೊಳಿಸಲಾಯಿತು; ಅನುಬಾಯಿ ಪಾತ್ರದಲ್ಲಿ ಸುಖದಾ ಖಾಂಡ್‍ಕೇಕರ್ ಮತ್ತು ಭೀಯುಬಾಯಿ ಪಾತ್ರದಲ್ಲಿ ಅನುಜಾ ಗೋಖಲೆ. ಅದರ ಮುಂದಿನ ತಿಂಗಳು, ಮರಾಠಾ ಸಾಮ್ರಾಟ ಛತ್ರಪತಿ ಸಾಹುನ ಪಾತ್ರವಹಿಸಲು ಮಹೇಶ್ ಮಾಂಜ್ರೇಕರ್‌ರನ್ನು ಗೊತ್ತುಮಾಡಲಾಯಿತು. ಚಿತ್ರದ ನಿರೂಪಕನ ಪಾತ್ರವನ್ನು ಇರ್ಫಾನ್ ಖಾನ್‍ರಿಗೆ ಹಂಚಲಾಯಿತು. ಚಿತ್ರೀಕರಣ ಆರಂಭವಾಗುವ ಮುನ್ನ ಎಲ್ಲ ನಟರು ತರಬೇತಿ ಪಡೆಯಬೇಕಾಗಿತ್ತು; ಸಿಂಗ್ ಮತ್ತು ಪಡುಕೋಣೆ ಕತ್ತಿಯ ಬಳಕೆ, ಕುದುರೆ ಸವಾರಿ ಮತ್ತು ಪ್ರಾಚೀನ ಭಾರತೀಯ ಸಮರ ಕಲೆಯಾದ ಕಳರಿ ಪಯಟ್ಟುವನ್ನು ಕಲಿತರು. ಆ ಪಾತ್ರಕ್ಕಾಗಿ ಸಿಂಗ್ ಮರಾಠಿಯನ್ನು ಕಲಿಯಬೇಕಾಗಿತ್ತು ಮತ್ತು ತಲೆಯನ್ನು ಬೋಳಿಸಿಕೊಳ್ಳಬೇಕಾಗಿತ್ತು. ಪಡುಕೋಣೆ ಕಥಕ್ ನೃತ್ಯದ ಪಾಠಗಳನ್ನು ತೆಗೆದುಕೊಳ್ಳಬೇಕಾಯಿತು. ಕಾಶೀಬಾಯಿ ಪಾತ್ರಕ್ಕೆ ತಯಾರಾಗಲು, ಪೇಶ್ವಾಗಳ ಆರೋಹಣದ ಸಮಯದಲ್ಲಿ ಮಾತನಾಡಲ್ಪಡುತ್ತಿದ್ದ ಪೇಶ್ವಾಯಿ ಮರಾಠಿ ಉಪಭಾಷೆಯ ತರಬೇತಿಯನ್ನು ೧೫ ದಿನಗಳು ಪಡೆದರು. ಆಜ಼್ಮಿ ತಮ್ಮ ಪಾತ್ರಕ್ಕಾಗಿ ತಮ್ಮ ತಲೆಯನ್ನು ಸಂಪೂರ್ಣವಾಗಿ ಬೋಳಿಸಿಕೊಂಡರು. === ತಯಾರಿಕಾಪೂರ್ವ ಹಂತ === ಇದರ ಪ್ರಮಾಣಕ್ಕೆ ತಕ್ಕಂತೆ, ಚಿತ್ರಕ್ಕೆ ವಿವರವಾದ ಮತ್ತು ದುಬಾರಿಯಾದ ತಯಾರಿಕಾಪೂರ್ವ ಕಾರ್ಯ ಬೇಕಾಗಿತ್ತು. ಇದಕ್ಕೆ ವ್ಯಾಪಕ ಸಂಶೋಧನೆ ಮತ್ತು ಯೋಜನೆ ಬೇಕಾಗಿತ್ತು. ಚಿತ್ರದಲ್ಲಿ ಸಲೋನಿ ಧತ್ರಕ್, ಶ್ರೀರಾಮ್ ಅಯ್ಯಂಗಾರ್ ಮತ್ತು ಸುಜೀತ್ ಸಾವಂತ್ ನಿರ್ಮಾಣ ವಿನ್ಯಾಸಕರಾಗಿ ಕೆಲಸಮಾಡಿದರು. . ಇದಕ್ಕಾಗಿ ಅಯ್ಯಂಗಾರ್ ಮತ್ತು ಸಾವಂತ್ ತಾವೇ ಸ್ವಂತವಾಗಿ ಸಂಶೋಧಿಸಲು ಆರಂಭಿಸಿ ಪುಣೆ ಮತ್ತು ಸತಾರಕ್ಕೆ ಭೇಟಿನೀಡಿದರು ಮತ್ತು ಮರಾಠಾ ವಾಸ್ತುಶಿಲ್ಪದ ಬಗ್ಗೆ ಕಲಿತರು. ಚಿತ್ರವನ್ನು ೨೦೦೪ರಲ್ಲಿ ಕೈಬಿಡಲಾದರೂ ಅವರು ಸಂಶೋಧನೆಯನ್ನು ಮುಂದುವರೆಸಿದರು. ಹಲವಾರು ವರ್ಷಗಳ ನಂತರ ಚಿತ್ರವನ್ನು ಪುನರುಜ್ಜೀವಿತಗೊಳಿಸಿದ ಮೇಲೆ ಅವರು ಭನ್ಸಾಲಿಯನ್ನು ಭೇಟಿಯಾದರು. ಭನ್ಸಾಲಿ ಇವರ ಸಂಶೋಧನೆ ಮತ್ತು ಪ್ರಸ್ತುತಿಯಿಂದ ಪ್ರಭಾವಿತರಾದರು. ಮುಘಲರ ಮೇಲೆ ಮತ್ತಷ್ಟು ಸಂಶೋಧನೆ ಬಯಸಿದ ಭನ್ಸಾಲಿ ಧತ್ರಕ್‍ರನ್ನು ತೊಡಗಿಸಿಕೊಂಡರು. ನಂತರ ಭನ್ಸಾಲಿ ಕಥೆಯನ್ನು ಕಲಾ ನಿರ್ದೇಶಕರೊಂದಿಗೆ ಹಂಚಿಕೊಂಡು ತಮ್ಮ ದೂರದೃಷ್ಟಿ ಮತ್ತು ತಯಾರಿಕೆಯ ವಿಸ್ತಾರವನ್ನು ವಿವರಿಸಿದರು. ತಯಾರಿಕಾಪೂರ್ವ ಕೆಲಸವು ಫ಼ೆಬ್ರುವರಿ ೨೦೧೪ ರಷ್ಟು ಮುಂಚಿತವಾಗಿ ಆರಂಭವಾಗಿ ಚಿತ್ರೀಕರಣ ಮುಂದುವರಿದಾಗಲೂ ಮುಂದುವರಿದು ಮತ್ತು ಅಕ್ಟೋಬರ್ ೨೦೧೫ರಲ್ಲಿ ಚಿತ್ರೀಕರಣ ಮುಗಿಯುವವರೆಗೂ ನಡೆಯಿತು; ಇದು ಹತ್ತೊಂಭತ್ತು ತಿಂಗಳು ನಡೆಯಿತು. ಒಮ್ಮೆ ಭನ್ಸಾಲಿಯವರೊಂದಿಗೆ ಚರ್ಚಿಸಿ ರಂಗಸಜ್ಜುಗಳು ಮತ್ತು ಸ್ಥಳ ಸರಣಿಗಳ ಸಂಖ್ಯೆ ನಿರ್ಧಾರಿತವಾದ ಮೇಲೆ, ತಯಾರಿಕೆಯು ಮುಂದುವರಿಯಿತು. ಕಲಾ ನಿರ್ದೇಶಕರೊಂದಿಗೆ, ವಾಸ್ತುಶಿಲ್ಪಿಗಳು, ವಿನ್ಯಾಸಕರು, ಸ್ಥೂಲಚಿತ್ರ ಕಲಾವಿದರು ಮತ್ತು ಊರೆ ಕಲಾವಿದರು ಸೇರಿದಂತೆ ಹತ್ತೊಂಭತ್ತು ಸಹಾಯಕ ಕಲಾ ನಿರ್ದೇಶಕರು ಒಳಗೊಂಡಿದ್ದರು. ಫ಼ಿಲ್ಮ್ ಸಿಟಿಯಲ್ಲಿ ಇಪ್ಪತ್ತೆರಡು ರಂಗಸಜ್ಜುಗಳನ್ನು ನಿರ್ಮಿಸಲಾಯಿತು. ಶನಿವಾರ್ ವಾಡಾ ಮತ್ತು ಆಯಿನಾ ಮೆಹೆಲ್‍ನ ನಿಖರ ಪ್ರತಿಕೃತಿಗಳಾಗಿದ್ದ ಎರಡು ಅತಿ ದೊಡ್ಡ ರಂಗಸಜ್ಜುಗಳಿದ್ದವು. ಕಲಾ ನಿರ್ದೇಶಕರು ಪುಣೆ, ನಾಸಿಕ್ ಮತ್ತು ಸಾತಾರಾದಿಂದ ವಾಸ್ತುಶಿಲ್ಪೀಯ ಸಂಶೋಧನೆಯನ್ನು ಮಾಡಿದರು ಮತ್ತು ಪ್ರಾಚೀನ ಕಾಲದ ಆಂತರಿಕ ಹಾಗೂ ಬಾಹ್ಯ ವಿನ್ಯಾಸಗಳನ್ನು ಅರ್ಥಮಾಡಿಕೊಳ್ಳಲು ಕೋಟೆಗಳು, ಕೊತ್ತಳದ ಗೋಡೆಗಳು ಹಾಗೂ ನಗರದ್ವಾರಗಳನ್ನು ಅಧ್ಯಯನ ಮಾಡಿದರು. ಎಲ್ಲ ರಂಗಸಜ್ಜುಗಳನ್ನು ಭವ್ಯವಾದ ವಸ್ತುಗಳು ಮತ್ತು ಊರೆಗಳಿಂದ ಅಲಂಕರಿಸಿ ಆಂತರಿಕ ಸ್ಥಳಗಳಿಗೆ ಪ್ರಾಚೀನ ಮರಾಠಾ ಸಾಮ್ರಾಜ್ಯದ ಅನಿಸಿಕೆಯನ್ನು ನೀಡಿದರು. ರಂಗಸಜ್ಜುಗಳನ್ನು ಬೆಳಗಲು ಕೇವಲ ಮಣ್ಣಿನ ದೀಪಗಳು ಮತ್ತು ದೀವಟಿಗೆಗಳನ್ನು ಬಳಸಲಾಯಿತು. ರೇಷ್ಮೆ ಸೀರೆಗಳನ್ನು ಬಳಸಲಾಯಿತು. ಚಿತ್ರಕ್ಕಾಗಿ ಹೆಚ್ಚುಕಡಿಮೆ ೩೦,೦೦೦ ಎಣ್ಣೆ ದೀಪಗಳನ್ನು ತಯಾರಿಸಲಾಯಿತು ಮತ್ತು ಯುದ್ಧದ ದೃಶ್ಯಗಳಿಗೆ ೫೦೦ ರಕ್ಷಾಕವಚಗಳನ್ನು ವಿನ್ಯಾಸಗೊಳಿಸಲಾಯಿತು. ಆ ಕಾಲದಲ್ಲಿ ಧರಿಸಲ್ಪಡುತ್ತಿದ್ದ ತಲೆಕಾಪುಗಳು ಮತ್ತು ಬೂಟುಗಳು ಕೂಡ ಇದ್ದವು. ರಕ್ಷಾಕವಚವು ಹತ್ತು-ಇಪ್ಪತ್ತು ಕೆ.ಜಿ. ತೂಕವಿತ್ತು ಮತ್ತು ತಲೆಕಾಪು ಎರಡು ಕೆ.ಜಿ. ತೂಕವಿತ್ತು. ಊರೆಗಳನ್ನು ಮುಂಬಯಿಯಲ್ಲಿ ತಯಾರಿಸಿ ಹೊರಗಿನ ಚಿತ್ರೀಕರಣ ಸ್ಥಳವಾದ ರಾಜಸ್ಥಾನಕ್ಕೆ ಸಾಗಿಸಬೇಕಾಯಿತು. === ವಸ್ತ್ರಗಳು === ಚಿತ್ರದ ವಸ್ತ್ರಗಳನ್ನು ಅಂಜು ಮೋದಿ ಮತ್ತು ಮ್ಯಾಕ್ಸಿಮಾ ಬಾಸು ವಿನ್ಯಾಸಗೊಳಿಸಿದರು. ವಸ್ತ್ರಗಳು ಮತ್ತು ೧೮ನೇ ಶತಮಾನದ ಭವ್ಯತೆಯನ್ನು ಚಿತ್ರಿಸಲು ನೆರವಾಗುವ ಸಲುವಾಗಿ, ಪಾತ್ರಗಳು, ಅವರ ಭಾವನೆಗಳು ಹಾಗೂ ವ್ಯಕ್ತಿತ್ವಗಳನ್ನು ಅರ್ಥಮಾಡಿಕೊಡಲು ವಿನ್ಯಾಕರೊಂದಿಗೆ ಭನ್ಸಾಲಿ ವಿವರವಾದ ಕಥೆ ಹೇಳುವ ಅವಧಿಗಳನ್ನು ನಡೆಸಿದರು. ಹಲವಾರು ಪ್ರಾಚೀನ ಸ್ಮಾರಕಗಳಿಗೆ ಭೇಟಿನೀಡುವ ಮೂಲಕ ಬಾಸು ತಮ್ಮ ಸಂಶೋಧನೆಯನ್ನು ಆರಂಭಿಸಿದರು. ಇದು ಅವರಿಗೆ ಪ್ರಾಚೀನ ಮಹಾರಾಷ್ಟ್ರ ಸಂಸ್ಕೃತಿ ಬಗ್ಗೆ ಸ್ವಲ್ಪ ಮುನ್ನೋಟವನ್ನು ನೀಡಿತು. ಉಡುಪುಗಳು ಮತ್ತು ವಸ್ತ್ರಗಳ ಇತಿಹಾಸದ ಬಗ್ಗೆ ಹೆಚ್ಚಿನ ಜ್ಞಾನವನ್ನು ಸಂಗ್ರಹಿಸಲು ಅವರು ಕೆಲವು ನಗರಗಳಿಗೂ ಪ್ರಯಾಣ ಬೆಳೆಸಿದರು. ಬರೀ ಮೂರು ಮುಖ್ಯ ಪಾತ್ರಗಳಿಗೆ ಸುಮಾರು ೩೦೦ ಉಡುಪುಗಳನ್ನು ವಿನ್ಯಾಸಗೊಳಿಸಲಾಯಿತು. ಉಡುಪುಗಳನ್ನು ನೇಯಲು ನಿಜವಾದ ಜ಼ರಿ ಮತ್ತು ಚಿನ್ನದ ತಂತಿಗಳನ್ನು ಬಳಸಲಾಯಿತು. ಕಾಶೀಬಾಯಿಯ ನೋಟಗಳು ಮತ್ತು ಉಡುಪುಗಳನ್ನು ವಿನ್ಯಾಸಗೊಳಿಸಲು ರಾಜಾ ರವಿ ವರ್ಮನ ವರ್ಣಚಿತ್ರಗಳನ್ನು ಉಲ್ಲೇಖವಾಗಿ ಬಳಸಲಾಯಿತು. ಸೀರೆಗಳನ್ನು ತಯಾರಿಸಲು ಆ ಅವಧಿಯಲ್ಲಿ ಧರಿಸಲ್ಪಡುತ್ತಿದ್ದ ರೇಷ್ಮೆ, ಮಸ್ಲಿನ್, ಖಾದಿ ಮತ್ತು ಚಂದೇರಿಗಳಂತಗ ಬಟ್ಟೆಗಳನ್ನು ವಿನ್ಯಾಸಗೊಳಿಸಲಾಯಿತು. ಆ ಕಾಲದಲ್ಲಿ ಪೇಶ್ವೆಗಳು ದೋತ್ರಗಳು, ಜಾಮಾಗಳು ಮತ್ತು ಬಹಳ ಅಗಲವಾದ ಭಾಗದ ಅಂಗರ್ಖಾಗಳನ್ನು ಧರಿಸುತ್ತಿದ್ದರು, ಹಾಗಾಗಿ ಅದು ಬಾಜೀರಾವ್‍ನ ಪಾತ್ರದಲ್ಲಿ ವಿಶೇಷವಾಗಿತ್ತು. ಬಾಜೀರಾವ್‍ನ ರಕ್ಷಾಕವಚವನ್ನು ವಿನ್ಯಾಸಗೊಳಿಸಲು ಉಕ್ಕಿನ ಉಂಗುರಗಳು, ಖಾಕಿ ಮತ್ತು ಬೆಳ್ಳಿ ಬಣ್ಣವನ್ನು ಬಳಸಲಾಯಿತು. ಚಿತ್ರದಲ್ಲಿ ದುಬಾರಿ ಮತ್ತು ನಿಜವಾದ ಆಭರಣಗಳನ್ನು ಬಳಸಲಾಗಿತ್ತು. ವಿನ್ಯಾಸಕರು ಪ್ರತಿಯೊಂದು ಪಾತ್ರಕ್ಕೆ ಆಭರಣಗಳನ್ನು ಸೃಷ್ಟಿಸಿದರು. ಪಾತ್ರಗಳಿಗೆ ಅಗತ್ಯವಿದ್ದ ರಾಜಯೋಗ್ಯ ನೋಟವನ್ನು ನೀಡಲು ನೈಜ ಬಸ್ರಾ ಮುತ್ತುಗಳು, ಪ್ರಾಚೀನ ಹರಳುಗಳು ಮತ್ತು ಕತ್ತರಿಸದ ವಜ್ರಗಳಂತಹ ಉತ್ತಮ ವಸ್ತುಗಳನ್ನು ಬಳಸಲಾಗಿತ್ತು. === ಪ್ರಧಾನ ಛಾಯಾಗ್ರಹಣ === ಛಾಯಾಗ್ರಾಹಕ ಸುದೀಪ್ ಚ್ಯಾಟರ್ಜಿ ಚಿತ್ರವನ್ನು ಆರಿ ಅಲೆಕ್ಸಾ ಎಕ್ಸ್‌ಟಿ ಮಸೂರಗಳನ್ನು ಬಳಸಿ ಚಿತ್ರೀಕರಿಸಿದರು. ಪ್ರಧಾನ ಛಾಯಾಗ್ರಹಣವು ಫ಼ಿಲ್ಮ್ ಸಿಟಿ ಮುಂಬಯಿಯಲ್ಲಿ ೯ ಅಕ್ಟೋಬರ್ ೨೦೧೪ ರಂದು ಆರಂಭವಾಯಿತು. ಬಹುತೇಕ ಚಿತ್ರದ ಚಿತ್ರೀಕರಣ ಬಹಳ ವಿವರವಾದ ರಂಗಸಜ್ಜುಗಳಲ್ಲಿ ನಡೆಯಿತು. ಹೊರಾಂಗಣ ಸ್ಥಳದ ಚಿತ್ರೀಕರಣವು ಜೈಪುರದ ಅಂಬರ್ ಕೋಟೆಯಲ್ಲಿ ಫ಼ೆಬ್ರುವರಿ ೨೦೧೫ರಲ್ಲಿ ಆರಂಭವಾಯಿತು. ಜನಸಂದಣಿಯ ದೃಶ್ಯಗಳನ್ನು ಕೂಡ ಅಲ್ಲಿ ಚಿತ್ರೀಕರಿಸಲಾಯಿತು. ಚಿತ್ರವನ್ನು ಆರಂಭಿಸುವ ಮುನ್ನ, ಯಾವ ಭಾಗಗಳನ್ನು ಚಿತ್ರೀಕರಿಸಬೇಕಾಗಿದೆ ಮತ್ತು ಯಾವ ಭಾಗಗಳನ್ನು ದೃಶ್ಯ ಪರಿಣಾಮಗಳನ್ನು ಬಳಸಿ ತಯಾರಿಸಬೇಕು ಎಂಬುದನ್ನು ತಂಡವು ಚರ್ಚಿಸಿತು. ಕೇವಲ ಕಷ್ಟಕರ ಅಥವಾ ಚಿತ್ರೀಕರಿಸಲು ಅಸಾಧ್ಯವೆಂದು ಪರಿಗಣಿಸಲ್ಪಟ್ಟ ದೃಶ್ಯಭಾಗಗಳನ್ನು ದೃಶ್ಯ ಪರಿಣಾಮಗಳನ್ನು ಬಳಸಿ ತಯಾರಿಕೋತ್ತರ ಹಂತದಲ್ಲಿ ಸೃಷ್ಟಿಸಲಾಯಿತು. ಯುದ್ಧ ದೃಶ್ಯಗಳಿಗೆ ಸಾಹಸ ದೃಶ್ಯಭಾಗಗಳನ್ನು ಶಾಮ್ ಕೌಶಲ್ ಸಂಯೋಜಿಸಿದರು. ಗಣೇಶ್ ಆಚಾರ್ಯ, ರೆಮೊ ಡಿಸೂಜ಼ಾ, ಪೋನಿ ವರ್ಮಾ, ಶಂಪಾ ಗೋಪಿಕೃಷ್ಣ ಮತ್ತು ಬಿರ್ಜೂ ಮಹಾರಾಜ್‌ ಚಿತ್ರದ ಹಾಡುಗಳ ದೃಶ್ಯಭಾಗಗಳಿಗೆ ನೃತ್ಯ ಸಂಯೋಜಕರಾಗಿದ್ದರು. ಧ್ವನಿ ಮುದ್ರಣವನ್ನು ಸ್ಥಳದಲ್ಲಿಯೇ ಮಾಡಲಾಗಿತ್ತು. ಬಾಜೀರಾವ್ ಮಸ್ತಾನಿಯನ್ನು ಅಕ್ಟೋಬರ್ ೨೦೧೪ ಮತ್ತು ಅಕ್ಟೋಬರ್ ೨೦೧೫ ರ ನಡುವೆ ೨೧೭ ದಿನಗಳಲ್ಲಿ ಚಿತ್ರೀಕರಿಸಲಾಯಿತು. == ಧ್ವನಿವಾಹಿನಿ == ಚಿತ್ರದ ಹಿನ್ನೆಲೆ ಸಂಗೀತವನ್ನು ಸಂಚಿತ್ ಬಲ್ಹಾರಾ ಸಂಯೋಜಿಸಿದರು ಮತ್ತು ಧ್ವನಿವಾಹಿನಿ ಸುರುಳಿಯನ್ನು ಭನ್ಸಾಲಿ ಸಂಯೋಜಿಸಿದರು. ಹಾಡುಗಳಿಗೆ ಸಾಹಿತ್ಯವನ್ನು ಸಿದ್ಧಾರ್ಥ್–ಗರಿಮಾ, ಎ. ಎಂ. ತುರಾಜ಼್ ಮತ್ತು ಪ್ರಶಾಂತ್ ಇಂಗೋಲೆ ಬರೆದಿದ್ದರು. ಧ್ವನಿಸುರುಳಿ ಸಂಗ್ರಹದಲ್ಲಿ ಹತ್ತು ಮೂಲ ಹಾಡುಗಳಿವೆ ಮತ್ತು ಇವನ್ನು ಶ್ರೇಯಾ ಘೋಷಾಲ್, ಅರ್ಜಿತ್ ಸಿಂಗ್, ವಿಶಾಲ್ ದಾದ್ಲಾನಿ, ಶಶಿ ಸುಮನ್, ಕುನಾಲ್ ಪಂಡಿತ್, ಪೃಥ್ವಿ ಗಂಧರ್ವ, ಕನಿಕಾ ಜೋಶಿ, ರಾಶಿ ರಾಗಾ, ಗೀತಿಕಾ ಮಾಂಜ್ರೇಕರ್, ಪಾಯಲ್ ದೇವ್, ಶ್ರೇಯಸ್ ಪುರಾಣಿಕ್, ವೈಶಾಲಿ ಮ್ಹಾಡೆ, ಜಾವೇದ್ ಬಶೀರ್, ಗಣೇಶ್ ಚಂದನ್‍ಶಿವೆ ಮತ್ತು ಸುಖ್‍ವಿಂದರ್ ಸಿಂಗ್ ಹಾಡಿದ್ದಾರೆ. ಧ್ವನಿವಾಹಿನಿಯನ್ನು ಈರಾಸ್ ಮ್ಯೂಜ಼ಿಕ್ ೩೧ ಅಕ್ಟೋಬರ್ ೨೦೧೫ರಂದು ಬಿಡುಗಡೆಮಾಡಿತು. ಧ್ವನಿವಾಹಿನಿ ಸಂಗ್ರಹವನ್ನು ವಿಮರ್ಶಕರು ಉತ್ತಮವಾಗಿ ಸ್ವೀಕರಿಸಿ ರಚನೆಗಳನ್ನು ಪ್ರಶಂಸಿಸಿ ಅವುಗಳನ್ನು ಇಂಪಾದದ್ದು ಮತ್ತು ತಾಜಾ ಎಂದು ಕರೆದರು. == ಮಾರಾಟಗಾರಿಕೆ ಮತ್ತು ಬಿಡುಗಡೆ == ಬಾಜೀರಾವ್ ಮಸ್ತಾನಿ ೨೦೧೫ರ ಅತ್ಯಂತ ನಿರೀಕ್ಷಿತ ಬಿಡುಗಡೆಗಳಲ್ಲಿ ಒಂದಾಗಿತ್ತು. ತಯಾರಿಕೆಯ ವೇಳೆ ಸೋರಿಕೆಯನ್ನು ತಡೆಯಲು ವಿಶೇಷ ಕಾಳಜಿಯನ್ನು ವಹಿಸಲಾಯಿತು; ಎಲ್ಲವನ್ನೂ ರಹಸ್ಯವಾಗಿ ಮಾಡಲಾಯಿತು. ಒಂದೇ ಒಂದು ಸಾಲಿನ ಸಂಭಾಷಣೆ ಇರುವ ಟೀಜ಼ರ್ ಟ್ರೇಲರ್‌ನ್ನು ೧೬ ಜುಲೈ ೨೦೧೫ ರಂದು ಬಿಡುಗಡೆ ಮಾಡಲಾಯಿತು. ಟೀಜ಼ರ್ ಎಲ್ಲ ಸುದ್ದಿಮೂಲಗಳಿಂದ ಬಹಳ ಪ್ರಶಂಸೆ ಪಡೆಯಿತು ಮತ್ತು ಅದನ್ನು ಭವ್ಯ ಹಾಗೂ ಮಹಾನವೆಂದು ಪರಿಗಣಿಸಲಾಯಿತು. ಟ್ರೇಲರ್‌ನ್ನು ೨೦ ನವೆಂಬರ್ ೨೦೧೫ ರಂದು ಬಿಡುಗಡೆ ಮಾಡಲಾಯಿತು ಮತ್ತು ಇದು ಕೂಡ ಉತ್ತಮವಾಗಿ ಸ್ವೀಕರಿಸಲ್ಪಟ್ಟಿತು. ಇದರ ಬಿಡುಗಡೆಯ ಮುನ್ನವೇ ಮತ್ತು ಚಿತ್ರವನ್ನು ನೋಡದೆಯೇ, ಬಾಜೀರಾವ್‍, ಮಸ್ತಾನಿ ಹಾಗೂ ಕಾಶೀಬಾಯಿಯ ವಂಶಸ್ಥರು "ಮಲ್ಹಾರಿ" ಹಾಗೂ "ಪಿಂಗಾ" ನೃತ್ಯ ದೃಶ್ಯಭಾಗಗಳು, ಕಾಶೀಬಾಯಿ ಹಾಗೂ ಮಸ್ತಾನಿ ಧರಿಸಿದ ಹೊಟ್ಟೆ ಭಾಗವನ್ನು ತೋರಿಸುವ ಸೀರೆಗಳು, ಅಶ್ಲೀಲವೆಂದು ಪರಿಗಣಿಸಿ ಒಂದು ಸಂಭಾಷಣೆ, ಮತ್ತು ಟ್ರೇಲರ್‌ನಲ್ಲಿ ತೋರಿಸಲಾದ ಒಂದು ಗುಪ್ತ ಕ್ಷಣದ ಬಗ್ಗೆ ತಮ್ಮ ಅಸಮ್ಮತಿಯನ್ನು ವ್ಯಕ್ತಪಡಿಸಿ, ನಿರ್ದೇಶಕರು ಅತಿಯಾದ ಸೃಜನಾತ್ಮಕ ಸ್ವಾತಂತ್ರ್ಯವನ್ನು ತೆಗೆದುಕೊಂಡಿದ್ದಾರೆಂದು ಸಾಧಿಸಿದರು. ವಂಶಸ್ಥರು ಚಿತ್ರದ ಬಿಡುಗಡೆಯ ವಿರುದ್ಧವಿಲ್ಲದಿದ್ದರೂ ಅವರು ಆ ಎರಡು ಹಾಡುಗಳನ್ನು ತೆಗೆಯಬೇಕು ಮತ್ತು ವಿಮರ್ಶಿಸುವ ಹಾಗೂ ಚಿತ್ರದಿಂದ ಇತರ ಆಕ್ಷೇಪಾರ್ಹ ವಸ್ತುವನ್ನು ತೆಗೆಯಲು ಸಲಹೆ ಮಾಡುವ ಸಲುವಾಗಿ ತಮಗಾಗಿ ಚಲನಚಿತ್ರವನ್ನು ಪ್ರದರ್ಶಿಸಬೇಕು ಎಂದು ತಯಾರಕರನ್ನು ಸಾರ್ವಜನಿಕವಾಗಿ ಕೇಳಿಕೊಂಡರು. ಸಾರ್ವಕಾಲಿಕವಾಗಿ ನಿರ್ಮಿಸಲ್ಪಟ್ಟ ಅತ್ಯಂತ ದುಬಾರಿ ಚಲನಚಿತ್ರಗಳಲ್ಲಿ ಒಂದಾದ ಬಾಜೀರಾವ್ ಮಸ್ತಾನಿಯ ಒಟ್ಟು ಬಂಡವಾಳ ₹1.45 ಶತಕೋಟಿಯಷ್ಟಿತ್ತು. ಬಿಡುಗಡೆಯ ಮೊದಲೇ, ಚಿತ್ರವು ವಿವಿಧ ಹಕ್ಕುಗಳ ಮಾರಾಟಗಳ ಮೂಲಕ ತನ್ನ ತಯಾರಿಕಾ ವೆಚ್ಚಗಳ ಬಹುತೇಕ ಎಲ್ಲವನ್ನೂ ತುಂಬಿಕೊಂಡಿತು. ಚಿತ್ರವು ವಿಶ್ವಾದ್ಯಂತ ೧೮ ಡಿಸೆಂಬರ್ ೨೦೧೫ರಂದು ಬಿಡುಗಡೆಗೊಂಡಿತು. ಈರಾಸ್ ಹೋಂ ವೀಡಿಯೊದಿಂದ ವಿತರಿಸಲ್ಪಟ್ಟ ಚಿತ್ರವನ್ನು ಡಿವಿಡಿ ಮತ್ತು ಬ್ಲೂರೇಯಲ್ಲಿ ೧೮ ಮಾರ್ಚ್ ೨೦೧೬ರಂದು ಬಿಡುಗಡೆ ಮಾಡಲಾಯಿತು. ಚಿತ್ರವು ಕಂಪನಿಯ ವಾಹಿನಿ ಸೇವೆಯಾದ ಈರಾಸ್ ನೌ ನಲ್ಲೂ ಲಭ್ಯವಿದೆ. ಬಾಜೀರಾವ್ ಮಸ್ತಾನಿಯ ವಿಶ್ವ ದೂರದರ್ಶನದ ಪ್ರಥಮ ಪ್ರದರ್ಶನವು ಕಲರ್ಸ್ ವಾಹಿನಿಯಲ್ಲಿ ೨೩ ಎಪ್ರಿಲ್ ೨೦೧೬ರಂದು ಆಯಿತು. == ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ == === ವಿಮರ್ಶಾತ್ಮಕ ಪ್ರತಿಕ್ರಿಯೆ === ಬಾಜೀರಾವ್ ಮಸ್ತಾನಿ ಸಕಾರಾತ್ಮಕ ವಿಮರ್ಶಾತ್ಮಕ ಪ್ರತಿಕ್ರಿಯೆಯನ್ನು ಪಡೆಯಿತು. === ಬಾಕ್ಸ್ ಆಫ಼ಿಸ್ === ಬಾಜೀರಾವ್ ಮಸ್ತಾನಿ ಪ್ರಮುಖ ವಾಣಿಜ್ಯಿಕ ಯಶಸ್ಸೆನಿಸಿಕೊಂಡಿತು. ಈ ಚಿತ್ರವು ಭಾರತದಲ್ಲಿ ₹2.55 ಶತಕೋಟಿಗಿಂತ ಹೆಚ್ಚು ಮತ್ತು ವಿದೇಶಿ ಮಾರುಕಟ್ಟೆಯಲ್ಲಿ ₹1.02 ಶತಕೋಟಿಗಿಂತ ಹೆಚ್ಚು ಹಣಗಳಿಸಿ ವಿಶ್ವವ್ಯಾಪಿಯಾಗಿ ಒಟ್ಟು ₹3.56 ಶತಕೋಟಿಗಿಂತ ಹೆಚ್ಚು ಹಣಗಳಿಸಿತು. === ಪ್ರಶಸ್ತಿ ಗೌರವಗಳು === ೬೩ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ, ಬಾಜೀರಾವ್ ಮಸ್ತಾನಿ ಭನ್ಸಾಲಿಯವರಿಗೆ ಅತ್ಯುತ್ತಮ ನಿರ್ದೇಶಕ, ಆಜ಼್ಮಿಯವರಿಗೆ ಅತ್ಯುತ್ತಮ ಪೋಷಕ ನಟಿ, ಚ್ಯಾಟರ್ಜಿಯವರಿಗೆ ಅತ್ಯುತ್ತಮ ಛಾಯಾಗ್ರಹಣ ಮತ್ತು ಅತ್ಯುತ್ತಮ ಕಲಾ ನಿರ್ದೇಶನ ಸೇರಿದಂತೆ ಏಳು ಪ್ರಶಸ್ತಿಗಳನ್ನು ಪಡೆಯಿತು. ೬೧ನೇ ಫಿಲ್ಮ್‌ಫೇರ್ ಪ್ರಶಸ್ತಿ ಸಮಾರಂಭದಲ್ಲಿ ಈ ಚಿತ್ರವು ಹದಿನಾಲ್ಕು ನಾಮನಿರ್ದೇಶನಗಳನ್ನು ಪಡೆಯಿತು. ಬಾಜೀರಾವ್ ಮಸ್ತಾನಿ ಅತ್ಯುತ್ತಮ ಚಲನಚಿತ್ರ, ಭನ್ಸಾಲಿಯವರಿಗೆ ಅತ್ಯುತ್ತಮ ನಿರ್ದೇಶಕ, ಸಿಂಗ್‍ರಿಗೆ ಅತ್ಯುತ್ತಮ ನಟ ಮತ್ತು ಚೋಪ್ರಾರಿಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಸೇರಿದಂತೆ ಅತಿ ಹೆಚ್ಚು ಒಂಭತ್ತು ಪ್ರಶಸ್ತಿಗಳನ್ನು ಗೆದ್ದಿತು. == ಐತಿಹಾಸಿಕ ತಪ್ಪುಗಳು == ಚಿತ್ರವು ರಾವ್ ಕಾದಂಬರಿಯ ರೂಪಾಂತರವಾಗಿದೆ. ಈ ಕಾದಂಬರಿಯ ನಿಖರತೆಯನ್ನು ದೀರ್ಘಕಾಲದಿಂದ ಪ್ರಶ್ನಿಸಲಾಗಿದೆ. ಪೇಶ್ವೆಗಳ ಬಗ್ಗೆ ವಿದ್ವಾಂಸರೆಂದು ಪರಿಗಣಿತರಾದ ಇತಿಹಾಸಕಾರರಾದ ನಿನಾದ್ ಬೇಡೇಕರ್‌ರೊಂದಿಗೆ ಭನ್ಸಾಲಿ ಸಮಾಲೋಚಿಸಿದರು. ಮಸ್ತಾನಿಯ ನಿಜವಾದ ವಂಶಾವಳಿಯ ಬಗ್ಗೆ ವಿವಾದವಾಗಿದೆ; ಮಸ್ತಾನಿಯ ಎರಡು ಕಥನಗಳು ಅಸ್ತಿತ್ವದಲ್ಲಿವೆ– ಅವಳು ವೇಶ್ಯೆ ಮತ್ತು ಬಾಜೀರಾವ್‍ನ ಉಪಪತ್ನಿಯಾಗಿದ್ದಳು ಎಂದು ಒಂದು ಹೇಳುತ್ತದೆ, ಮತ್ತು ಚಲನಚಿತ್ರದಲ್ಲಿ ಚಿತ್ರಿಸಲ್ಪಟ್ಟದ್ದು ಮತ್ತೊಂದು ಕಥೆಯಾಗಿದೆ. ಇತಿಹಾಸಕಾರ ಸೈಲಿ ಪಳಂದೆ-ದಾತಾರ್ ಪ್ರಕಾರ, ಸಂಪ್ರದಾಯಬದ್ಧತೆಯ ಕಾರಣ ಆ ಕಾಲದ ಸ್ತ್ರೀಯರ ಬಗ್ಗೆ ಬಹಳ ಕಡಿಮೆ ತಿಳಿದಿದೆ; ಸ್ತ್ರೀಯರಿಗೆ ಅನೇಕ ಸವಲತ್ತುಗಳು ಮತ್ತು ಹಕ್ಕುಗಳನ್ನು ನೀಡಲಾಗುತ್ತಿದ್ದಿಲ್ಲ, ಮತ್ತು ಆ ಕಾಲದ ಬಹುತೇಕ ಮೂಲಗಳು ರಾಜಕೀಯ ಯುದ್ಧಗಳು, ಕಂದಾಯ ಮತ್ತು ಸಮಾಜಾರ್ಥಿಕ ದಾಖಲೆಗಳ ಕಥನಗಳಾಗಿವೆ. ಬಾಜೀರಾವ್ ಮತ್ತು ಮಸ್ತಾನಿಯರ ರಾಜಕೀಯ ವಿವಾಹವು ಜಾನಪದದ ಭಾಗವಾದ ಮತ್ತು ನಂತರ ಅಸಾಮಾನ್ಯ ಪ್ರಣಯದ ಸಾಂಕೇತಿಕ ಚಿತ್ರಣವಾಗಿ ಪರಿವರ್ತಿತವಾದ ರೀತಿಯ ಬಗ್ಗೆ ಯಾವುದೇ ಸಾಕ್ಷ್ಯಾಧಾರವಿಲ್ಲ ಎಂದೂ ಪಳಂದೆ-ದಾತಾರ್ ಹೇಳಿದರು. ಮಾಹಿತಿಯ ಈ ಕೊರತೆಯ ಕಾರಣದಿಂದ, ಐತಿಹಾಸಿಕ ವಾಸ್ತವಾಂಶಗಳ ಬಗ್ಗೆ ಭನ್ಸಾಲಿ ಸ್ವಾತಂತ್ರ ಬಳಸಿ ಸಿನಿಮೀಯ ಪರಿಣಾಮಗಳಿಗಾಗಿ ಕೆಲವು ಸಂಗತಿಗಳನ್ನು ಉತ್ಪ್ರೇಕ್ಷಿಸಿದರು. ಅದು ಐತಿಹಾಸಿಕವಾಗಿ ನಿಖರವಾಗಿದೆ ಎಂದು ಸಾಧಿಸುವುದಿಲ್ಲ ಎಂದು ಚಿತ್ರದ ಉಪಕಾರಗಳ ಉಲ್ಲೇಖಗಳಲ್ಲಿನ ಹಕ್ಕು ನಿರಾಕರಣೆಯು ಹೇಳುತ್ತದೆ. ನೃತ್ಯ ದೃಶ್ಯಭಾಗಗಳನ್ನು ಐತಿಹಾಸಿಕ ಸಂದರ್ಭದಲ್ಲಿ ಕಾಲ್ಪನಿಕ ಮತ್ತು ಸೂಕ್ತವಲ್ಲದ್ದು ಎಂದು ವ್ಯಾಪಕವಾಗಿ ಕಾಣಲಾಗಿದೆ. ಕಾಶೀಬಾಯಿಯ ಸ್ಥಾನಮಾನದ ಮಹಿಳೆಯು ಸಾರ್ವಜನಿಕವಾಗಿ ಕುಣಿಯುವುದರ ಅನುಚಿತತೆಯ ಹೊರತಾಗಿ, ಅವಳು ಒಂದು ಬಗೆಯ ಸಂಧಿವಾತದಿಂದ ನರಳುತ್ತಿದ್ದಳು ಮತ್ತು ನೃತ್ಯವು ಅವಳಿಗೆ ದೈಹಿಕವಾಗಿ ಅಸಾಧ್ಯವಾಗಿತ್ತು ಎಂದು ಕೆಲವು ಇತಿಹಾಸಕಾರರು ಹೇಳಿದ್ದಾರೆ. ಇಬ್ಬರೂ ಮಹಿಳೆಯರು ಸಾಮಾಜಿಕವಾಗಿ ಕೇವಲ ಒಮ್ಮೆ ಭೇಟಿಯಾದರು ಎಂದು ಕೆಲವು ಇತಿಹಾಸಕಾರರು ಸಾಧಿಸಿದರೆ ಅವರು ಎಂದೂ ಭೇಟಿಯಾಗಲಿಲ್ಲ ಎಂದು ಇತರರು ಹೇಳಿದ್ದಾರೆ. == ಉಲ್ಲೇಖಗಳು == == ಹೊರಗಿನ ಕೊಂಡಿಗಳು == @ ಐ ಎಮ್ ಡಿ ಬಿ ಟೆಂಪ್ಲೇಟು: ಬಾಜೀರಾವ್ ಮಸ್ತಾನಿ ಬಾಕ್ಸ್ ಆಫ಼ೀಸ್ ಮೋಜೊದಲ್ಲಿ ಬಾಜೀರಾವ್ ಮಸ್ತಾನಿ (ಚಲನಚಿತ್ರ)